Homeರಾಷ್ಟ್ರೀಯಸಚಿವ ಧರ್ಮೇಂದ್ರ ಪ್ರಧಾನ್‌ ರಾಜಿನಾಮೆಗೆ ಆಗ್ರಹಿಸಿ ಸಂಸತ್‌ ಭವನದ ವಿಪಕ್ಷಗಳ ಪ್ರತಿಭಟನೆ

ಸಚಿವ ಧರ್ಮೇಂದ್ರ ಪ್ರಧಾನ್‌ ರಾಜಿನಾಮೆಗೆ ಆಗ್ರಹಿಸಿ ಸಂಸತ್‌ ಭವನದ ವಿಪಕ್ಷಗಳ ಪ್ರತಿಭಟನೆ

Opposition continues protest demanding Dharmendra Pradhan's resignation

ನವದೆಹಲಿ,ಜು.24- ನೀಟ್‌ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಆರೋಪದ ಹಿನ್ನೆಲೆ ದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಬಲವಾದ ಒತ್ತಾಯ ವ್ಯಕ್ತಪಡಿಸಿವೆ.

ಸಂಸತ್‌ನ ಮಳೆಗಾಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಈ ವಿಚಾರ ರಾಜಕೀಯವಾಗಿ ಕಾವು ಪಡೆದುಕೊಂಡಿದ್ದು, ಇಂಡಿ ಒಕ್ಕೂಟದ ಸಂಸದರು ಹಾಗೂ ಕಾಂಗ್ರೆಸ್‌‍ ಸದಸ್ಯರು ಸಂಸತ್‌ ಭವನದ ಮಕರ ದ್ವಾರದಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನೀಟ್‌ ಪರೀಕ್ಷೆಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಣೆ ಹೊತ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ವಿಪಕ್ಷಗಳು, ಧರ್ಮೇಂದ್ರ ಪ್ರಧಾನ್‌ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿವೆ.

ಈ ವಿಷಯದ ಕುರಿತು ಸದನದಲ್ಲಿ ತೀವ್ರ ಗದ್ದಲ ಉಂಟಾದ ಕಾರಣ ಲೋಕಸಭೆಯ ಕಲಾಪವನ್ನು ಮುಂದೂಡಲಾಯಿತು. ಇತ್ತ, ಸಂಸತ್‌ನಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಗೆ ತಿರುಗೇಟು ನೀಡಲು ಬಿಜೆಪಿ ತನ್ನ ಎಲ್ಲಾ ಸಂಸದರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚನೆ ನೀಡಿದೆ.

ರಾಜಕೀಯ ಬೆಳವಣಿಗೆಗಳ ಜೊತೆಗೆ ದೇಶದಾದ್ಯಂತ ವಿದ್ಯಾರ್ಥಿಗಳ ಆಕ್ರೋಶವೂ ದಿನೇದಿನೇ ಹೆಚ್ಚುತ್ತಿದೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೇರಿ ನೀಟ್‌ ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ನ್ಯಾಯಸಮತ ತನಿಖೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕೆಂದು ಆಗ್ರಹಿಸುತ್ತಿದ್ದಾರೆ.

ಜಂತರ್‌ ಮಂತರ್‌ ಕಡೆಗೆ ಸಾಗುವ ಮೆಟ್ರೋ ಹಾಗೂ ಬಸ್‌‍ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳ ಭಾರೀ ಜನಸಂದಣಿ ಕಂಡುಬಂದಿದ್ದು, ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ. ವಿದ್ಯಾರ್ಥಿಗಳ ಬೆಂಬಲಕ್ಕೆ ಕಾಂಗ್ರೆಸ್‌‍ ಪಕ್ಷವೂ ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ತನ್ನ ಕಾರ್ಯಕರ್ತರಿಗೆ ಅಧಿಕೃತ ಕರೆ ನೀಡಿದೆ.

ಇತ್ತೀಚೆಗೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಇಂಡಿ ಒಕ್ಕೂಟದ ಸಂಸದರ ಸಭೆ ನಡೆದಿದ್ದು, ನೀಟ್‌ ಅಕ್ರಮದ ವಿರುದ್ಧ ಸಮನ್ವಯಿತ ಹೋರಾಟ ನಡೆಸುವ ಕುರಿತು ಚರ್ಚೆ ನಡೆದಿದೆ. ಸಭೆಯ ಬಳಿಕ ರಾಹುಲ್‌ ಗಾಂಧಿ ಗಾಂಧಿ ಸತಿಗೆ ಭೇಟಿ ನೀಡಿ ಅಹಿಂಸಾತಕ ಹೋರಾಟದ ಸಂದೇಶ ನೀಡಿದ್ದು, ವಿದ್ಯಾರ್ಥಿಗಳ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News